ಶ್ರೀ ಕಬ್ಬಾಳಮ್ಮ ದೇವಸ್ಥಾನ

ಕಬ್ಬಾಳು ಪುನ್ಯಕ್ಷೇತ್ರ

IMG-20180713-WA0039

ಶ್ರೀ ಕಬ್ಬಾಳಮ್ಮ ದೇವಸ್ಥಾನಾ

ಶ್ರೀ ಕಬ್ಬಾಳಮ್ಮ ವಿಗ್ರಹವನ್ನು ಆರಾಧಿಸಲಾಗುತ್ತಿದೆ. ಲಕ್ಷಾಂತರ ಭಕ್ತಾದಿಗಳು ಪೂಜೆ ಸಲ್ಲಿಸಲು ಪ್ರತಿ ವರ್ಷ ಬರುತ್ತಾರೆ.

ಶ್ರೀ ಕಬ್ಬಾಳಮ್ಮ ದೇವಿ ಕಬ್ಬಾಳು ಕ್ಷೇತ್ರ


ಮಹಾವೀರನ ನಿರ್ವಾಣದ ನಂತರ ಗೌತಮಗಣಧಾರನೇ ಮೊದಲಾದ ಅನೇಕ ಋಷಿಗಳು ಜೈನ ಗುರುಗಳಾಗಿದ್ದು, ಅವರಲ್ಲಿ ಒಬ್ಬನಾದ ಭದ್ರಬಾಹು ಸ್ವಾಮಿಯು ಉಜ್ಜಯಿನಿಯಲ್ಲಿದ್ದಾಗ ಹನ್ನೆರಡು ವರ್ಷ ಬರಗಾಲ ದೇಶವನ್ನು ಕ್ಷೋಬೆಗೆ ಒಳಪಡಿಸುತ್ತದೆ. ಎಂಬ ಭವಿಷ್ಯ ವಾಣಿಯನ್ನು ನುಡಿದುದರ ಪರಿಣಾಮವಾಗಿ ಸಂಪೂರ್ಣ ಸಂಘವು ಉತ್ತರಾಪಥದಿಂದ ದಕ್ಷಿಣಪಥಕ್ಕೆ ವಲಸೆ ಬಂದು ಕ್ರಮೇಣ ನೂರಾರು ಜನಪದಗಳನ್ನು ಗ್ರಾಮಗಳನ್ನು ಸಂತೋಷದಿಂದಿದ್ದ ಜನಧನಕನಕಸಸ್ಯ ಗೋಮಹಿಷಜಾವಿಕುಚವನ್ನು ಒಳಗೊಂಡ ದೇಶವೊಂದಕ್ಕೆ ಬಂದಿತೆಂದೂ ಹೇಳಲಾಗಿದೆ. ಹೀಗೆ ದಕ್ಷಿಣ ಪಥಕ್ಕೆ ವಲಸೆ ಬಂದು ಅನೇಕ ಜೈನ ಗುರು ಮುನಿ ಸನ್ಯಾಸಿಗಳು ಕಟವಪ್ರ (ಶ್ರವಣಬೆಳಗೊಳ), ತಿಪ್ಪೂರು (ಮದ್ದೂರು ತಾಲ್ಲೂಕು) ಹಾಗೂ ನಿಂಬ ಗ್ರಾಮ (ಚನ್ನಪಟ್ಟಣ ತಾಲ್ಲೂಕು) ಗೊಮ್ಮಟಗಿರಿ(ಮೈಸೂರು ತಾಲ್ಲೂಕು) ಕನಕಗಿರಿ (ಚಾಮರಾಜನಗರ ತಾಲ್ಲೂಕು) ಮುಂತಾದ ಪ್ರದೇಶಗಳಿಗೆ ಹೋದ ಹಾಗೇ ಕನಕಪುರ ತಾಲ್ಲೂಕಿನ ಕಬ್ಬಾಳು ದುರ್ಗಕ್ಕೆ ಬಂದು ತಮ್ಮ ತಮ್ಮ ಶ್ರೇಣಿಗೆ ತಕ್ಕಂತೆ ತಪಸ್ಸನ್ನು ಆಚರಿಸುತ್ತಿದ್ದರು. ಅವರು ಈ ಕಬ್ಬಾಳು ಬೆಟ್ಟವನ್ನು ಹತ್ತಲು ಪಡುತ್ತಿದ್ದ ಶ್ರಮವನ್ನು ಕಂಡು ಕರ್ನಾಟಕದಲ್ಲಿ ಜೈನ ಧರ್ಮವು ಅಭಿವೃದ್ದಿ ಹೊಂದುತ್ತಿದ್ದ ಕಾಲದಲ್ಲಿ ಅಂದರೆ ಸುಮಾರು ಕ್ರಿ.ಶ. 900 ರಿಂದ 1100 ದ ಒಳಗೆ ಈ ಕಬ್ಬಾಳು ಬೆಟ್ಟಕ್ಕೆ ಗಂಗ ರಾಜ ಅಥವಾ ಅವನ ಮಕ್ಕಳು ಈ ಬೆಟ್ಟವನ್ನು ಹತ್ತಿ ತುದಿ ಮುಟ್ಟಲು, ಮೆಟ್ಟಲುಗಳನ್ನು ಕಡಿದಾದ ಬಂಡೆಯಲ್ಲಿಯೇ ಕೂರಿಸಿರುತ್ತಾರೆ. ಅಲ್ಲದೇ ಜೈನ ಮುನಿಗಳಿಗೆ ಅನುಕೂಲವಾಗುವಂತೆ ಬೆಟ್ಟದ ಮೇಲೆ ನೀರಿನ ಹೊಂಡವನ್ನು ಹಾಗೂ ಸಣ್ಣ ಮಂಟಪದಂತಿರುವ ಒಂದು ಆಶ್ರಯ ತಾಣವನ್ನು ನಿರ್ಮಿಸಿಕೊಡಲಾಯಿತು. ಮುಂದೆ ಹೊಯ್ಸಳರ ಆಳ್ವಿಕೆಯ ನಂತರದ ಕಾಲದಲ್ಲಿ ಈ ಬೆಟ್ಟ ಪ್ರದೇಶಕ್ಕೆ ಸುಮಾರಾದ ಕೋಟೆಯನ್ನು ನಿರ್ಮಿಸಲಾಯಿತೆಂದೂ ತಿಳಿಯಬಹುದು.

ಶ್ರೀ ಕಬ್ಬಾಳಮ್ಮ ದೇವಿ ಕಬ್ಬಾಳು ಕ್ಷೇತ್ರ


ಕಬ್ಬಾಳು ಗ್ರಾಮವು ಸಾತನೂರು ಹೋಬಳಿ ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ (ಹಿಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ)ಗೆ ಸೇರಿದ್ದಾಗಿದೆ. ಈ ಗ್ರಾಮವು ಬೆಟ್ಟ ಗುಡ್ಡಗಳ ನಡುವೆ ಕುಳಿಯಂತೆ ಕಾಣುವ ಸಮತಟ್ಟಿನ ಪ್ರದೇಶವನ್ನು ಕಬ್ಬಾಳು ಕುಳಿ - ಎಂಬುದಾಗಿ ಗುರ್ತಿಸುತ್ತಾರೆ. ಕಬ್ಬಾಳು, ಕಂಸಾಗರ, ಅತ್ತಿಹಳ್ಳಿ, ಹೊಸಳ್ಳಿ, ವಡೇರಹಳ್ಳಿಗೇರಳ್ಳಿ, ಅರೆಕಟ್ಟೆದೊಡ್ಡಿ, ದಾಳಿಂಬ ಇನ್ನೂ ಕೆಲವು ಹಳ್ಳಿಗಳು ಈ ಕುಳಿಯಲ್ಲಿವೆ. ಈ ಕುಳಿಗೆ ಮೆರಗು ನೀಡುವಂತಹ ಕಬ್ಬಾಳು ಬೆಟ್ಟ, ಗೇರಳ್ಳಿಬೆಟ್ಟ, ತೈಲೂರುಕಲ್ಲು, ಮತ್ತು ಕುರುಚಿ ಅಚ್ಚಲು ಬೆಟ್ಟಗಳಿವೆ. ಕಬ್ಬಾಳು ಗ್ರಾಮದ ಪಶ್ಚಿಮದಲ್ಲಿರುವ ಕಬ್ಬಾಳು ದುರ್ಗ ಸಾಕಷ್ಟು ಎತ್ತರವಿರುವುದರಿಂದ ಈ ಬೆಟ್ಟದ ಮೇಲಿಂದ ಕಾಣುವ ದೃಶ್ಯಗಳು ನಯನ ಮನೋಹರವಾಗಿದೆ. ಬೆಟ್ಟದ ಕೆಳಗೆ ಈಶಾನ್ಯ ಭಾಗದಲ್ಲಿ ಕಬ್ಬಾಳೂ ಗ್ರಾಮವಿದೆ. ಹಳೇಕಬ್ಬಾಳು ಮತ್ತು ಹೊಸಕಬ್ಬಾಳು ಗ್ರಾವiಗಳು ಅಕ್ಕಪಕ್ಕದಲ್ಲಿದ್ದರೂ ದೇವಾಲಯವಿರುವುದು ಹಳೆಯ ಕಬ್ಬಾಳು ಗ್ರಾಮದಲ್ಲಿ ಮತ್ತು ಬೆಟ್ಟದ ಸಾಲನ್ನು ಭೀಮನ ಬೆಟ್ಟಗಳೆಂದು ಕರೆಯುತ್ತಾರೆ.

ಕಬ್ಬಾಳು ಗ್ರಾಮವು ಮತ್ತು ಗ್ರಾಮದೇವತೆ ಕಬ್ಬಾಳಮ್ಮ – ಕಾಳಿಕಾದೇವಿ ಪೂರ್ವಾಭಿಮುಖವಾಗಿದ್ದು ದೇವಾಲಯದ ಪಶ್ಚಿಮದಲ್ಲಿ ಕಬ್ಬಾಳು ದುರ್ಗವಿದ್ದು ಸಮುದ್ರ ಮಟ್ಟದಿಂದ 1069 ಮೀಟರ್ ಎತ್ತರದಲ್ಲಿರುವ ಶಂಖಾಕೃತಿಯ ಈ ಗಿರಿದುರ್ಗ ಇತಿಹಾಸ ಪ್ರಸಿದ್ದವಾಗಿದ್ದಾಗಿದೆ. ದೇವಾಲಯದ ಈಶಾನ್ಯ ಭಾಗದಲ್ಲಿ ಕಲ್ಯಾಣಿಯೂ ಆ ಕಲ್ಯಾಣಿಯ ಪಕ್ಕದಲ್ಲಿ ಒಂದು ಕೆರೆಯೂ ಇದ್ದು ಇದನ್ನು ಚೌಳಿಕಟ್ಟೆ ಎನ್ನುತ್ತಾರೆ. ದೇವಾಲಯದ ದಕ್ಷಿಣ ಭಾಗದಲ್ಲಿ ಕಬ್ಬಾಳು ಗ್ರಾಮವು ಬೆಳೆದಿದ್ದು ಉತ್ತರದಿಕ್ಕಿನಲ್ಲಿ ದೇವಾಲಯಕ್ಕೆ ಸೇರಿದ ಖಾಲಿ ಜಾಗವಿರುತ್ತದೆ. ಈ ಗ್ರಾಮದಲ್ಲಿ ಎಲ್ಲಾ ಕೋಮಿನವರು ವಾಸವಿದ್ದು ವ್ಯವಸಾಯ ಪ್ರಧಾನ ಉದ್ಯೋಗವಾಗಿರುತ್ತದೆ. ರಾಗಿ, ಭತ್ತ, ಅವರೆ, ಹುರಳಿ, ಕಡಲೆಕಾಯಿ, ಇನ್ನೂ ಮುಂತಾದ ಧಾನ್ಯಗಳನ್ನು ಬೆಳೆಯುವುದಲ್ಲದೆ, ಇದೀಗ ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಹಿಪ್ಪು ನೇರಳೆ ಬೆಳೆಯನ್ನು ಬೆಳೆದು ರೇಷ್ಮೆ ಗೂಡುಗಳಿಂದ ರೇಷ್ಮೆ ತಯಾರಿಸುವ ಉದ್ಯೋಗದಲ್ಲಿ ಹಲವರು ನಿರತರಾಗಿದ್ದಾರೆ.

ಕಬ್ಬಾಳು ತಲುಪಲು ಬೆಂಗಳೂರು ಮೈಸೂರು ಮಂಡ್ಯ ಕೊಳ್ಳೇಗಾಲಗಳಿಂದ ಬಸ್ ಸೌಕರ್ಯಗಳಿವೆ. ಬೆಂಗಳೂರಿನಿಂದ ಚನ್ನಪಟ್ಟಣ ತಲುಪಿ ಅಲ್ಲಿಂದ ಕಬ್ಬಾಳಿಗೆ ಬರುವುದು. ಇದು ಒಂದು ಮಾರ್ಗವಾದರೆ ಕನಕಪುರ ಮಾರ್ಗವಾಗಿ ಸಾತನೂರಿಗೆ ಬಂದು ಕಬ್ಬಾಳ ತಲುಪುವುದು ಇನ್ನೊಂದು ಮಾರ್ಗ ಬೆಂಗಳೂರಿನಿಂದ ಕಬ್ಬಾಳಿಗೆ ನೇರ ಬಸ್ ಸೌಕರ್ಯವಿದೆ. ಮೈಸೂರು ಮಂಡ್ಯ ರಾಮನಗರ ಮತ್ತು ಬೆಂಗಳೂರು ನಗರದಿಂದ ರೈಲು ಮಾರ್ಗವಾಗಿ ಕಬ್ಬಾಳನ್ನು ತಲುಪಬಹುದು. ಬೆಳ್ಳಗ್ಗೆ 6 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಚನ್ನಪಟ್ಟಣ ಅಥವಾ ಕನಕಪುರ ಮಾರ್ಗವಾಗಿ 80 ಕಿ.ಮೀ ಚನ್ನಪಟ್ಟಣದಿಂದ 21 ಕಿ.ಮೀ ಅಂತೆಯೇ ಸಾತನೂರಿನಿಂದ 6 ಕಿ.ಮೀ ದೂರದಲ್ಲಿದೆ.

ಕಬ್ಬಾಳು ದುರ್ಗದ ಇತಿಹಾಸ ಗಂಗ, ಹೊಯ್ಸಳರ ಕಾಲದಿಂದಲೂ ಪ್ರಸಿದ್ದವಾಗಿದ್ದು ಕಬ್ಬ ಹಾಳು ಎಂಬ ಹೆಸರಿನಲ್ಲಿ ಅದರ ಉಲ್ಲೇಖ ಕಾಣುತ್ತದೆ. ದುರ್ಗದ ತಪ್ಪಲಿನ ಹಳ್ಳಿಯಲ್ಲಿ ಕಾಳಿಕಾದೇವಿಯನ್ನು ಕಬ್ಬಾಳಮ್ಮ ಎಂಬ ಹೆಸರಿನಿಂದ ಕರೆಯುವ ಗ್ರಾಮದೇವತೆಯ ದೇವಾಲಯವಿದೆ. ಕಬ್ಬಾಳಮ್ಮ ಎನ್ನುವುದು ವಿಜಯನಗರ ಕಾಲೀನ ಶಾಸನದಲ್ಲಿ ಕಾಳಿಕಾದೇವಿ ಎಂದು ಕಂಬಗಳಿಂದ ಕೂಡಿದ ವಿಜಯನಗರ ಶೈಲಿಯ ಸಾಮಾನ್ಯ ರಚನೆ, ಗರ್ಭಗೃಹದ ಮೇಲಿನ ಶಿಖರ ಇಟ್ಟಿಗೆ ಗಾರೆ ಕೆಲಸದ ಈಚಿನ ಕಾಲದ ರಚನೆ, ಕಬ್ಬಾಳಮ್ಮನ ಗುಡಿಯ ಉತ್ತರದಲ್ಲಿ ಒಂದು ಭೈರವನ ಗುಡಿಯೂ ಇದ್ದು ಅದಕ್ಕೆ ಕೆಂಚಣ್ಣ ಮತ್ತು ಕರಿಯಣ್ಣ ಎಂದು ಕರೆಯುವ ಎರಡು ಮುಖಗಳಿವೆ. ಒಂದು ಪ್ರಾಕಾರವೂ ಒಂದು ಮುಖ ಮಂಟಪವೂ ಇದೆ. ಎತ್ತರದ ದುರ್ಗದಲ್ಲಿ ಕೂಡ ಹಳೆಯದಾದ ಒಂದು ಭೀಮೇಶ್ವರ ಗುಡಿಯೂ, ಕೊಳವೂ, ಧಾನ್ಯದ ಹಗೇವೂ ಇವೆ. ಬೆಟ್ಟದ ನಡು ಭಾಗದಲ್ಲಿ ಚಿಕ್ಕ ಶ್ರೀನಿವಾಸ ಮೂರ್ತಿ ಇರುವ ಗವಿಯೇ ಗುಡಿಯಾಗಿರುವ ಒಂದು ದೇಮಾಲಯವಿದೆ. ಈ ದೇವಾಲಯದ ಆವರಣದಲ್ಲಿ ಎರಡು ದೊಣೆಗಳಿವೆ. ಬೆಟ್ಟದ ತುದಿಯಲ್ಲಿ ಒಂದು ದೊಣೆಯಿದೆ. ಬೆಟ್ಟದ ಸುತ್ತಲೂ ಕೋಟೆ ಉಂಟು.

ಬೆಟ್ಟದ ಬುಡದ ಪ್ರದೇಶವನ್ನು ಕೋಟೋಶ್ವರ ಕಟ್ಟೆ ಎಂದೂ ನಾಲ್ಕೂ ಗೋಡೆಗಳ ಕಲ್ಲು ಹಾಸುಗಳ ಪ್ರವೇಶದ್ವಾರ, ಗೊಲ್ಲರ ಬಾಗಿಲು, ತೊಟ್ಟಿಲು ಆಕಾರದ ಮೆಟ್ಟಲುಗಳ ತೊಟ್ಟಿ ಕಲ್ಲು ದುರ್ಗದ ಮೇಲ್ಬಾಗದಲ್ಲಿ ಶಿಥಿಲವಾದ ಸ್ಮಾರಕಗಳ ನಡುವೆ ದೊಡ್ಡದಾದ ಒಂದು ರಾಗಿಯ ಕಣಜ. ದಕ್ಷಿಣದ ತುದಿಯಲ್ಲಿ ಹೆಣ ತಳ್ಳುವ ಮೂಲೆ ಇವೆಲ್ಲ ಅಲ್ಲಿಯ ವಾಸ್ತು ವಿಶೇಷಗಳು. ಬೆಟ್ಟದ ಮೇಳಿನ ಹರಿವಿನಲ್ಲಿ ಪಶ್ಚಿಮದ ತುದಿಯಲ್ಲಿ ಪಾಳೇಯಗಾರರದೆಂದು ಹೇಳಲಾಗುವ ಅರಮನೆಯೊಂದರ ಅವಶೇಷಗಳಿವೆ. ಆ ಅವಶೇಷಗಳ ಈಶಾನ್ಯಕ್ಕೆ ಸರೋವರದ, ಆಗ್ನೇಯ ಮೂಲೆಯಲ್ಲಿ ಕಬ್ಬಾಳಮ್ಮನ (ಕಾಳಿಕಾದೇವಿ) ಶೀಲ್ಪದ ಹಾಸುಗಲ್ಲು ಭಿನ್ನವಾಗಿ ಬಿದ್ದಿದೆ. ಅರಮನೆಯ ಅವಶೇಷಗಳ ನೈಋತ್ಯ ದಿಕ್ಕಿನಲ್ಲಿ ಮದ್ದಿನ ಮನೆ ಉಂಟು.

ಕಬ್ಬಾಳು ದುರ್ಗ


ಪ್ರತಿವರ್ಷ ಲಕ್ಷಾಂತರ ಭಕ್ತಾದಿಗಳು ಶ್ರೀ ಕಬ್ಬಾಳಮ್ಮ ದೇವಿಯನ್ನು ಪೂಜಿಸಲು ಕಬ್ಬಾಳು ದುರ್ಗಕ್ಕೆ ಆಗಮಿಸುತ್ತಾರೆ. ಭಕ್ತಾದಿಗಳು ಬೆಟ್ಟದ ಮೇಲಿರುವ ಮೂಲ ದೇವಸ್ಥಾನವನ್ನು ಕಾಣಬಹುದು. ದುರ್ಗದ ಕೋಟೆಯನ್ನು ಈಗಲೂ ಕಾಣಬಹುದು. ಬೆಟ್ಟದ ಮೇಲೆ ಕಲ್ಯಾಣಿ ಹಾಗೂ ಪೂರ್ವಭಾಗದಲ್ಲಿ ದೇವಿ ಗುಡಿಯು ಈಗಲೂ ಕಾಣಬಹುದು.

 

ಶ್ರೀ ಕಬ್ಬಾಳಮ್ಮ ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ಬಸವಣ್ಣ ದೇವಾಲಯದಲ್ಲಿ ಭಕ್ತಾದಿಗಳು ಸೇವೆ ಸಲ್ಲಿಸಬಹುದು.

 

ಶ್ರೀ ಕಬ್ಬಾಳು ಜಾತ್ರೆ ಪ್ರತಿ ವರ್ಷ ಮಾಘ ಮಾಸದ ಕೊನೆಯ ವಾರದಲ್ಲಿ ಆಚರಿಸಲಾಗುತ್ತದೆ

ದಿನ ಅಮ್ಮನವರಿಗೆ ಕುಂಕುಮ ಧಾರಣಾ ಮಹೋತ್ಸವ - ಹೊನ್ನೇರು ಚಪ್ಪರ ಪೂಜೆ ನಡೆಯುತ್ತದೆ. ಈ ದಿನ ಕಬ್ಬಾಳು ಗ್ರಾಮದ ಇಬ್ಬರು ಹುಡುಗರ ನೇತೃತ್ವದಲ್ಲಿ (ಒಂದು ಜೊತೆ) ಉಳುವ ನೇಗಿಲನ್ನು ಕಟ್ಟಿ ಕಬ್ಬಾಳಮ್ಮನ ಪೂಜೆಯ ನಂತರ ಕೃಷಿ ಬೇಸಾಯದ ಮೊದಲನೆಯ ಹಂತವೆಂಬಂತೆ ಸ್ವಲ್ಪ ಉಳಲು ಪ್ರಾರಂಭಿಸುತ್ತಾರೆ. ಮುಂದೆ ಇದೇ ಆ ಗ್ರಾಮದ ಎಲ್ಲರಿಗೂ ಆ ಸಾಲಿನ ಭೂಮಿಯ ಸಾಗುವಳಿ ಬಗ್ಗೆ ಉಳುವುದು ಪ್ರಾರಂಭವಾಗುತ್ತದೆ.

ನಂತರ ಗಂಧದ ತುಂಡುಗಳಿಂದ ತಯಾರಿಸಿದ ಕೆಂಡವನ್ನು ಬಾಂಡಲೆಯಲ್ಲಿ ದೇವಸ್ಥಾನದಿಂದ ತಂದು ಅಲ್ಲಿಯ ಶ್ರೀನಿವಾಸನ(ಕೆಲವರು ಅದು ರಂಗನಾಥನ ವಿಗ್ರಹವೇನ್ನುವರು) ವಿಗ್ರಹದ ಮೇಲೆ ಸುರಿಯುತ್ತಾರೆ. ಈ ಆಚರಣೆಗೆ ಗ್ರಾಮಸ್ಥರು ತಮ್ಮದೇ ಆದ ಮಹತ್ವವನ್ನು ಹೇಳುತ್ತಾರೆ. ಅಲ್ಲಿ ಕಬ್ಬಾಳಮ್ಮನಿಗೆ ಪೂಜೆ ಮಾಡಿದ ನಂತರ ಜನರು ತಮ್ಮಲ್ಲಿ ಇರುವ ಅಸಹನೆಯ ಭಾವನೆಗಳನ್ನು ಹಾಗೂ ಬೆಂಕಿಯಂತೆ ಕಾಡುತ್ತಿರುವ ಹಲವು ಯೋಜನೆಗಳನ್ನು ನಿವಾರಿಸುವಂತೆ ಆ ವೇಳೆಯಲ್ಲಿ ದೇವರಿಗೆ ಪ್ರಾರ್ಥಿಸಿಕೊಂಡು ನಮಸ್ಕರಿಸುತ್ತಾರೆ. ಅಲ್ಲದೆ ಬಂದ ಭಕ್ತರು ಆ ವೇಳೆಯಲ್ಲಿ ಅದನ್ನು ಸ್ವೀಕರಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ. ನಂತರ ಮತ್ತೊಮ್ಮೆ ಕಬ್ಬಾಳಮ್ಮ ದೇವರಿಗೆ ಅರ್ಚಕನು ಮಂಗಳಾರತಿ ಮಾಡಿ ಅನೇಕ ಜನ ಮನ ಚಿಂತೆಯನ್ನು ದೂರ ಮಾಡುವಂತೆ ಅವನು ದೇವರನ್ನು ಪ್ರಾರ್ಥಿಸಿಕೊಂಡು ನಂತರ ಚಿಂತನೆ ಎಂಬ ಗಂಧದ ಚಕ್ಕೆಗಳನ್ನು ಇಟ್ಟಿರುವ ಬಾಂಡಲಿಗೆ ದೇವರ ಮಂಗಳಾರತಿಯ ದ್ವೀಪ ಜ್ವಾಲೆಯನ್ನು ಮುಟ್ಟಿಸುತ್ತಾನೆ. ಆಗ ಅಲ್ಲಿಗೆ ಬಂದ ಭಕ್ತರಿಗೆ ತಮ್ಮ ಮನ ಚಿಂತೆಯು ಹತ್ತಿ ಉರಿದು ನಾಶವಾಗುತ್ತಿರುವುದನ್ನು ನೋಡಿ ಸಂತೋಷಪಡುತ್ತಾರೆ. ಅಲ್ಲದೇ ತಮ್ಮ ಚಿಂತೆಯು ಅಲ್ಲಿ ಉರಿಯುತ್ತಿರುವ ಬೆಂಕಿಯ ಜ್ವಾಲೆಯಲ್ಲಿ ಸೇರಿತೆಂಬ ವಿಶ್ವಾಸನೆಯಂತೆ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ ಇರುವ ವೇಳೆಯಲ್ಲಿ ಅರ್ಚಕರು ಈ ಕೆಂಡಸಹಿತವಾದ ಅಗ್ನಿಯ ಜ್ವಾಲೆಯನ್ನು ತೆಗೆದುಕೊಂಡು ಬಂದು ಶ್ರೀನಿವಾಸ ದೇವರ ವಿಗ್ರಹದ ಮೇಲೆ ಸುರಿಯುತ್ತಾನೆ. ಆಗ ಜನರು ತಮ್ಮ ಮನದಲ್ಲಿ ಇದ್ದ ಚಿಂತೆಯನ್ನು ಕಬ್ಬಾಳಮ್ಮನು ನಿವಾರಿಸುವ ದ್ಯೋತವಾಗಿ, ಅದನ್ನು ಬಾಂಡಲೆಯಲ್ಲಿ ಇದ್ದ ಗಂಧದ ಚಕ್ಕೆಗಳು ಉರಿಯುವ ಮುಖಾಂತರ ಆ ಅಗ್ನಿಯಲ್ಲಿ ಸುಟ್ಟು ಹಾಕುತ್ತಾಳೆ. ಉಳಿದ ಭಾಗವನ್ನು ಅಂದರೆ ಅದರ ಅವಶೇಷ ಸಹಿತವಾದ ಎಲ್ಲವನ್ನು ಶ್ರೀನಿವಾಸನು ತನ್ನ ತಲೆಯ ಮೇಲೆ ಹಾಕಿಕೊಂಡು ಭಕ್ತರಾದ ತಮ್ಮನ್ನು ರಕ್ಷಿಸುತ್ತಾನೆಂಬುದು, ಈ ಒಂದು ಕಾರ್ಯಕ್ರಮದ ಸಂಕೇತ. ಈ ಪದ್ದತಿಯೇ ಒಂದು ವಿಶಿಷ್ಟ ರೀತಿಯಿಂದ ಕೂಡಿರುತ್ತದೆ ಅಲ್ಲದೇ ಮನುಷ್ಯನ ಅನಿಷ್ಟ ಮತ್ತು ಕೆಟ್ಟ ಹಾಗೂ ತಮ್ಮ ಜೀವಕ್ಕೆ ಹಾನಿಯಾಗುವ ಈ ಮನಸ್ಸಿನ ಚಿಂತೆಗಳನ್ನು ನಿವಾರಿಸುವ ಕಾರ್ಯಕ್ರಮ ಇದಾಗಿದೆ. ಅಂದರೆ ಈ ಕಬ್ಬಾಳಮ್ಮನ ಜಾತ್ರೆಗೆ ಬರುವವರು ಮನಶುದ್ದಿಗಾಗಿ ಮಾಡುತ್ತಿದ್ದ ಒಂದು ಕಾರ್ಯಕ್ರಮ ವೈಖರಿ ಇದಾಗಿತ್ತು. ಅಲ್ಲದೇ ಹಿಂದಿನ ಕಾಲದ ಮನೋವೈಜ್ಞಾನಿಕ ಚಿಕಿತ್ಸೆಯ ಕಾರ್ಯಕ್ರಮವಾಗಿತ್ತು.

ಶ್ರೀ.ಕಬ್ಬಲಮ್ಮನಿಗೆ ವಿಶೇಷ ಪೂಜೆಯನ್ನು ನೀಡಲಾಗುತ್ತದೆ

ಹೋಮ, ಅಭಿಷೇಕ ಅನಾದಿಕಾಲದಿಂದ ಬಂದಿರುವ ಸಂಪ್ರದಾಯ ಬದ್ದವಾಗಿ ನಡೆಯುವ ದೇವರ ಮೊದಲನೆಯ ಪೂಜೆ ನಿಗದಿತ ಮನೆತನದ ವಂಶಸ್ಥರಿಂದ ಅಂದರೆ ಮೂರನೆಯ ದಿನ ದೇವರಿಗೆ ಅಭಿಷೇಕ ಮಾಡಿ ಹೋಮ ಹವನಗಳನ್ನು ಮಾಡಿ ಅರ್ಚಿಸುವವರು. ಈ ಹೋಮದ ಪೂರ್ಣಾಹುತಿ ಮುಗಿದ ನಂತರ ಮಾಡುವ ಮೊದಲನೆಯ ಕಬ್ಬಾಳಮ್ಮನ (ಕಾಳಿಕಾಂಬೆಯ) ಪೂಜೆ ಹಿಂದಿನ ಶಾನುಭೋಗರಾದ ಶ್ರೀ ರಾಮಯ್ಯನವರ ವಂಶಸ್ಥರದ್ದು. ಈ ಕಬ್ಬಾಳಮ್ಮ ದೇವರ ಪ್ರತಿಷ್ಠೆಯ ನಂತರ ನಿತ್ಯ ಮತ್ತು ಈ ವಿಶಿಷ್ಟ ಪೂಜೆಯನ್ನು ಮಾಡಲು ಶ್ರೀ ರಾಮಯ್ಯನವರೇ ಪ್ರಾರಂಭಿಸಿದ್ದರಿಂದ ಅವರೇ ಈ ಪೂಜಾ ಕಾರ್ಯವನ್ನು ಮಾಡಲು ಕಾರಣಕರ್ತರಾಗಿದ್ದರು ಮುಂದೆ ಅನಿವಾರ್ಯ ಕಾರಣಗಳಿಂದ ಈ ಪೂಜಾ ಕಾರ್ಯಗಳನ್ನು ಅವರ ವಂಶಿಕರು ಬಿಟ್ಟಿದ್ದರು. ಹಿಂದೆ ಪೂಜೆ ಮಾಡುತ್ತಿದ್ದ ಅರ್ಚಕರು ಅಂದರೆ ಶ್ರೀ ರಾಮಯ್ಯನವರ ವಂಶಸ್ಥರು ದೇವಿಯನ್ನು ಪೂಜೆ ಮಾಡುವ ಭಾಗ್ಯದ ಒಂದು ಕ್ರಮವಾಘಿ ಈ ವೇಳೆಯಲ್ಲಿ ವಿಶಿಷ್ಟ ಪುಜೆಯನ್ನು ಮಾಡಲು ಅವಕಾಶವನ್ನು ಇಟ್ಟುಕೊಂಡಿರುತ್ತಾರೆ. ಅದರಂತೆ ಅವರು ಪೂಜೆ ಮಾಡುವ ಈ ಭಾಗ್ಯದ ದಿನದ ವೇಳೆಯಲ್ಲಿ ನಿತ್ಯ ಪೂಜೆ ಮಾಡುವ ಯಾವ ಅರ್ಚಕರು ಗರ್ಭಗುಡಿಯ ಒಳಗೆ ಇರುವುದಿಲ್ಲ. ಅವರೇ ಪೂಜೆ ಮಾಡಿ ಹೊರಬಂದ ನಂತರ ಮಿಕ್ಕವರ ಪೂಜೆ ನಡೆಯುತ್ತದೆ. ಶ್ರೀ ರಾಮಯ್ಯನವರ ವಂಶಸ್ಥರಿಂದ ಈಗಲೂ ಈ ವಿಶಿಷ್ಟ ಪೂಜಾ ಕೈಂಕರ್ಯ ನಡೆದು ಬರುತ್ತಿದೆ.

ಸಂಜೆ, ಯಳವಾರ-ಸುತ್ತಲಿನ ಏಳು ಗಾಮದಿಂದ ರೈತರು ತಮ್ಮ ಮನೆಯಿಂದ ನೊಗಾ ಕಟ್ಟಿದ ಜೊತೆಯ ಎತ್ತುಗಳ ಸಹಾಯದಿಂದ ಎರಡು ತುಂಡು ಸೌದೆಯನ್ನು ಕಟ್ಟಿಕೊಂಡು ಬಂದು ದೇವಸ್ಥಾನದ ಮುಂದೆ ದೇವರಿಗೆ ದೀಪ ಹಚ್ಚಿ ದೇವಸ್ಥಾನದ ಸುತ್ತಾ ಮೂರು ಸುತ್ತು ಬಂದು ಸೌದೆಯನ್ನು ಕೋಂಡದ ಬಳಿ ಹಾಕಿ ದೇವರ ತೀರ್ಥವನ್ನು ದನಗಳ ಮೇಲೆ ಹಾಕಿಸಿಕೊಂಡು ಹಾಗೂ ದೇವರ ದರ್ಶನವನ್ನು ಮಾಡಿಕೊಂಡು ಹೋಗುವ ಸಂಪ್ರದಾಯ. ಈ ಕಟ್ಟಿಗೆಯನ್ನು ಮೂರು ವಿಭಾಗ ಮಾಡಿ ಮಧ್ಯರಾತ್ರಿಯಲ್ಲಿ ದೇವರ ಅನುಮತಿಯನ್ನು ಕೇಳಿ ಈ ಕೊಂಡಕ್ಕೆ ಹೊಸ ಕಬ್ಬಾಳ ಗ್ರಾಮದವರು ಅಗ್ನಿ ಸ್ಪರ್ಶ ಮಾಡುವರು.

ಆ ದಿನ ಮುಂಜಾನೆಯೇ ದೇವರನ್ನು ಗ್ರಾಮದ ಕಲ್ಯಾಣಿಯ ಬಳಿ ಕರೆದುಕೊಂಡು ಹೋಗಲಾಗುತ್ತದೆ ನಂತರ ಕಬ್ಬಾಳಮ್ಮನನ್ನು ಕಲ್ಯಾಣಿಯಿಂದ ಕರೆತರುವ ಸಂಪ್ರದಾಯವು ಇಲ್ಲಿ ಒಂದು ವಿಶಿಷ್ಟ ಆಚರಣೆಯಾಗಿದೆ. ಅಲ್ಲಿ ಕಬ್ಬಾಳಮ್ಮ ದೇವತೆಗೆ ಪೂಜೆಯನ್ನು ಮಾಡಿ ದೇವಿಯನ್ನು ಗ್ರಾಮಕ್ಕೆ ಬರುವಂತೆ ಕರೆದು ನಂತರ ಕಲ್ಯಾಣಿಯಿಂದ ಕರೆತರುವುದು ಸಾಂಪ್ರದಾಯಕವಾಗಿದೆ. ಈ ವೇಳೆಯಲ್ಲಿ ಗ್ರಾಮದವರು ಕಬ್ಬಾಳಮ್ಮನಿಗೆ ನಡೆಮುಡಿಯನ್ನು ಹಾಕಿ, ಮಂಗಳವಾದ್ಯ, ಜನಪದ ಕಲಾವಿದರ ಕುಣಿತ ಮುಂತಾದ ಮೆರವಣಿಗೆಯ ಮೂಲಕ ಸಂಭ್ರಮದಿಂದ ಕರೆದುಕೊಂಡು ಬರುತ್ತಾರೆ. ಕಬ್ಬಾಳಮ್ಮನ ಉತ್ಸವ ಮೂರ್ತಿಯು ಕಲ್ಯಾಣಿಯಿಂದ ಅಗ್ನಿಕುಂಡದ ಬಾಗಿಲಿಗೆ ಬರುವ ವೇಳೆಗೆ ಗ್ರಾಮದ ಹಿರಿಯರಾದ ಹಾಗೂ ಈ ದೇವತೆಯನ್ನು ಪ್ರತಿಷ್ಠಾಪಿಸಿದ ಶ್ರೀ ರಾಮಯ್ಯನವರನ್ನು ಅವರ ಮನೆಯಿಂದ ಅಗ್ನಿಕುಂಡ ಬಾಗಿಲಿಗೆ ಕರೆತರುವುದು ಸಹ ಒಂದು ಪದ್ದತಿಯಾಗಿತ್ತು. ನಂತರ ಅಗ್ನಿಕುಂಡ ಬಳಿ ಮತ್ತೆ ಕಬ್ಬಾಳಮ್ಮನವರಿಗೆ ಪೂಜೆ ನಡೆದು ಕೊಂಡವನ್ನು ಸಂಪೂರ್ಣವಾಗಿ ಸಿದ್ದಿಗೊಳಿಸಿದ ಕೂಡಲೇ ದೇವರ ಅನುಮತಿಯೊಡನೆ ಕಬ್ಬಾಳಮ್ಮನ ಅರ್ಚಕರು ಮೊದಲ ಕೊಂಡ ಹಾಯುತ್ತಾರೆ.

ಹೀಗೆ ಕರೆದುಕೊಂಡು ಹೋಗುವ ಒಂದು ವರ್ಷದಲ್ಲಿ ಆ ತಾಲ್ಲೂಕಿನ ಧಣಿಗಳಾದ ಅಮುಲ್ದಾರ್ ರವರು ಈ ಜಾತ್ರಾ ವೈಭವ ಪದ್ದತಿಯನ್ನು ನೋಡಲು ಕಬ್ಬಾಳು ಗ್ರಾಮಕ್ಕೆ ಆಗಮಿಸಿದ್ದರು. ಕೊಂಡ ಹಾಯುವ ಸಂಪ್ರದಾಯದ ಕಾರ್ಯಕ್ರಮ ನಡೆಯತೊಡಗಿತು ಕಬ್ಬಾಳಮ್ಮನನ್ನು ಗ್ರಾಮದ ಕಲ್ಯಾಣಿಯಿಂದ ಅಗ್ನಿಕುಂಡ ಬಳಿಗೆ ಕರೆತರಲಾಗಿತ್ತು ಆದರೆ ಕಾರಣಾಂತರದಿಂದ ಗ್ರಾಮದ ಹಿರಿಯರಾದ ರಾಮಯ್ಯನವರ ವಂಶಸ್ಥರನ್ನೂ ಆ ವೇಳೆಗೆ ಅಲ್ಲಿಗೆ ಕರೆತರಲು ನಿಧಾನವಾಗಿತ್ತು. ಆ ದಿನ ಶ್ರೀ ರಾಮಯ್ಯನವರ ವಂಶಸ್ಥರ ಮನಸ್ಸಿಗೆ ವ್ಯತೆಯಾಗಿ ಈ ಕಾರಣದಿಂದ ದೇವರ ಮುಂದೆ ಕೊಂಡಹಾಯುವುದು ನಿಧಾನವಾಯಿತಲ್ಲ ಎಂದು ಚಿಂತಿಸಿ, ಈ ಕಾರ್ಯಕ್ರಮವನ್ನು ಅವರ ವಂಶಸ್ಥರ ಸಹಮತದಿಂದ ಅವರೇ ನಿಲ್ಲಿಸಿದರು.

ಸೋಮವಾರ ನಾಲ್ಕನೆಯ ದಿನ(ಮುಂದುವರೆಯುವ ಪೂಜಾ ಕಾರ್ಯಗಳು) ಮಧ್ಯಾಹ್ನ ತೇರು: ಮಧ್ಯಾಹ್ನದ ನಂತರ ಕಬ್ಬಾಳಮ್ಮ ಮತ್ತು ಬಸವೇಶ್ವರ ದೇವರುಗಳ ತೇರು ಸಹ ನಡೆಯುವ ಕಾರ್ಯಕ್ರಮ.

ಸಿಡಿಯ ಕಂಬವನ್ನು ಮೊದಲ ಪೂಜೆ ಮಾಡಿದ ನಂತರ ನೆಟ್ಟು ಮತ್ತೆ ಪೂಜೆ ಮಾಡುತ್ತಾರೆ ಈ ಸಿಡಿ ಕಂಬವು ಒಂದು ರೀತಿ ತಕ್ಕಡಿಯ ತರ ಇದ್ದು ಒಂದು ಕಡೆ ಕಾಗಡಿಯನ್ನು ಕಟ್ಟಿರುತ್ತಾರೆ, ಮತ್ತೊಂದು ಕಡೆ ಹಗ್ಗವು ಇರುತ್ತದೆ. ದೇವಿಗೆ ಹರಕೆ ಹೊತ್ತುವರಿಂದ ನಿಗದಿತ ಶುಲ್ಕವನ್ನು ಪಡೆದುಕೊಂಡು ಅವರನ್ನು ಕಾಗಡಿಯಲ್ಲಿ ಕುಳಿಸುತ್ತಾರೆ. ನಂತರ ಮತ್ತೊಂದು ಕಡೆ ಇರುವ ಹಗ್ಗವನ್ನು ಕೆಲವರು ಹಿಡಿದುಕೊಂಡು ತಕ್ಕಡಿಯಂತೆ ಸಮಮಾಡಿಕೊಂಡು ಒಂದು ಸುತ್ತು ತಿರುಗಿಸುತ್ತಾರೆ. ಈ ಕಾರ್ಯವನ್ನು ಮಾಡಲು ಅವರದೇ ಆದ ನೈಪುಣ್ಯತೆಯನ್ನು ಸಿಡಿ ನಡೆಸುವವರು ಹೊಂದಿರುತ್ತಾರೆ. ಇದೇ ಸಿಡಿ ಕಾರ್ಯಕ್ರಮ, ಹಿಂದೆ ಸಿಡಿಯ ಕಂಬದ ಮೇಲೆ ಸರಿಯಾಗಿ ಕಬ್ಬಾಳ ಬೆಟ್ಟದ ನೆರಳು ಬಿದ್ದ ವೇಳೆಗೆ ಕಬ್ಬಾಳಮ್ಮನ ದೇವರ ಪೂಜೆ ಮಾಡಿ ಸಿಡಿಯನ್ನು ನಡೆಸುತ್ತಿದ್ದರು. ಆದರೆ ಅದು ಈಗ ಬದಲಾಗಿದೆ.

ಮಂಗಳವಾರ ಐದನೆಯ ದಿನ (ಮುಂದುವರೆಯುವ ಪೂಜಾ ಕಾರ್ಯಗಳು) ಸಂಜೆ ಪಲ್ಲಕ್ಕಿ ಉತ್ಸವ: ಕನಕಪುರದ ಭಕ್ತರು ಇದರ ಆಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.

ಆರನೆಯ ದಿನ: ಮರುಸಿಡಿ: ಕಬ್ಬಾಳಮ್ಮನವರಿಗೆ ವಿಶೇಷ ಪೂಜೆ ನಂತರ ಮತ್ತೆ ಹರಕೆಹೊತ್ತ ಭಕ್ತರಿಂದ ಸಿಡಿಯ ಕಾರ್ಯಕ್ರಮ ಮುಂದುವರೆಯುತ್ತೆ.

ಶ್ರೀ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆಗಳು.

ಎಚಿಟನೆಯ ದಿನ: ದೇವಸ್ಥಾನದಲ್ಲಿ ಕಬ್ಬಾಳಮ್ಮನಿಗೆ ಅಭಿಷೇಕ ಪೂಜೆ ಹವನ ಹೋಮ ಮುಂತಾದವುಗಳು.

 

ಭಕ್ತಾದಿಗಳು ತಮ್ಮ ದೃಷ್ಟಿ ನಿವಾರಣೆಗೆ ತಡೆ ಸೇವೆಯನ್ನು ಶ್ರೀ ಕಬ್ಬಾಳಮ್ಮ ಪುಣ್ಯಕ್ಷೇತ್ರದಲ್ಲಿ ಮಾಡಿಸಬಹುದು